ಬೆಂಗಳೂರು: ಶಿಕ್ಷಣ ಸೇರಿದಂತೆ ಜನರ ದೈನಂದಿನ ಜೀವನದಲ್ಲಿ ಮಾತೃಭಾಷೆ ಪ್ರಧಾನವಾಗಿ ಬಳಕೆಯಾಗಬೇಕು ಎಂದು ಪ್ರತಿಪಾದಿಸಿರುವ ರಾಷ್ಟ್ರಿಯ ಸ್ವಯಂಸೇವಕ ಸಂಘ (ಆರ್ಎಸ್ಎಸ್), ರೂಪಾಯಿ ಚಿನ್ಹೆ ಹಾಗೂ ಭಾಷಾ ವಿವಾದಗಳನ್ನು ರಾಜಕೀಯ ನಾಯಕರ ಬದಲು ಸಾಮಾಜಿಕ ಹಾಗೂ ಸಮುದಾಯದ ಮುಖಂಡರು ಸೌಹಾರ್ದತೆಯ ನೆಲೆಗಟ್ಟಿನಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂಬ ಸಂದೇಶ ರವಾನಿಸಿದೆ.
ಬೆಂಗಳೂರಿನ ಚನ್ನೇನಹಳ್ಳಿಯಲ್ಲಿ ಸಂಘದ ವಾರ್ಷಿಕ ಅಖಿಲ ಭಾರತ ಪ್ರತಿನಿಧಿ ಸಭಾ (ಎಬಿಪಿಎಸ್) ವನ್ನು ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಉದ್ಘಾಟಿಸಿದರು. ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ಎಬಿಪಿಎಸ್ನಲ್ಲಿ 1,422 ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಉದ್ಘಾಟನೆ ಬೆನ್ನಲ್ಲೇ, ಆರ್ಎಸ್ಎಸ್ ಸಹ ಸರಕಾರ್ಯವಾಹ ಸಿ.ಆರ್.ಮುಕುಂದ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು.
ಆರ್ಎಸ್ಎಸ್ ಈ ಹಿಂದೆಯೇ ಮಾತೃಭಾಷೆ ಬಗ್ಗೆ ತನ್ನ ನಿಲುವನ್ನು ಪ್ರಕಟಿಸಿದೆ. ಒಬ್ಬ ವ್ಯಕ್ತಿ ತನ್ನ ಮಾತೃಭಾಷೆ ಜತೆಗೆ ಇನ್ನಿತರ ಪ್ರದೇಶಗಳಿಗೆ ಸೇರಿದ ಪ್ರಾದೇಶಿಕ ಭಾಷೆಗಳನ್ನು ಕಲಿಯಬಹುದು. ಇಂಗ್ಲಿಷ್ ಅನ್ನುಯ ವೃತ್ತಿಪರ ವಿಷಯಕ್ಕಾಗಿ ಕಲಿಕೆ ಮುಂದುವರಿಸಬಹುದು. ಕ್ಷೇತ್ರ ಪುನರ್ವಿಂಗಡಣೆ ವಿಚಾರ ಮುಂದಿಟ್ಟು ಕೆಲವು ನಾಯಕರು ಉತ್ತರ-ದಕ್ಷಿಣ ಭಾರತದವರೆಂದು ರಾಜಕೀಯ ಬೆರಸುವ ಯತ್ನ ನಡೆದಿದೆ. ಈ ವಿಚಾರದಲ್ಲಿ ಸಂಘವು ಹೆಚ್ಚೇನೂ ಹೇಳದು. ಆದರೆ, ಭಾಷಾ ವಿವಾದವನ್ನು ರಾಜಕೀಯ ನಾಯಕರ ವಿವೇಚನೆಗೆ ಬಿಡುವುದು ಸರಿಯಲ್ಲ. ಮಣಿಪುರದಲ್ಲಿ ಶಾಂತಿ ಸ್ಥಾಪನೆ ವಿಚಾರವಾಗಿ ಬುಡಕಟ್ಟು ಸಮುದಾಯಗಳೊಂದಿಗೆ ಸಾಮರಸ್ಯ ಮೂಡಿಸಲು ಯತ್ನಿಸುತ್ತಿದೆ ಎಂದರು.
ಶತಾಬ್ದಿ ವರ್ಷ, ಕಾರ್ಯ ವಿಸ್ತರಣೆ:
ಆರ್ಎಸ್ಎಸ್ ಮುಂದಿನ ವಿಜಯದಶಮಿ ವೇಳೆಗೆ 100 ವರ್ಷ ಪೂರೈಸಲಿದೆ. ಶತಾಬ್ದಿ ವರ್ಷಾಚರಣೆ ಹಿನ್ನೆಲೆಯಲ್ಲಿ ಸಂಘದ ಕಾರ್ಯವಿಸ್ತರಣೆಗೆ ಹೆಚ್ಚಿನ ಗಮನ ಹರಿಸಲಾಗುವುದು. ಸಮಾಜದ ಎಲ್ಲ ವರ್ಗದ ಜನರನ್ನು ಜೋಡಿಸಿಕೊಂಡು ಪಂಚಪರಿವರ್ತನೆ ಮಾಡುವ ಬಗ್ಗೆ ಎಬಿಪಿಎಸ್ನಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಂಘ ಕಾರ್ಯದ ವಿಸ್ತರಣೆಗಾಗಿ ಹಿಂದಿನ ವರ್ಷ ಸರಸಂಘಚಾಲಕರ ಕರೆಗೆ ಕರ್ನಾಟಕದ 2,453 ಸ್ವಯಂಸೇವಕರು ತಲಾ 2 ವರ್ಷ 'ಶತಾಬ್ದಿ ವಿಸ್ತಾರಕ'ರಾಗಿ ಪೂರ್ಣಾವಧಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮುಕುಂದ್ ವಿವರಿಸಿದರು.
ಶಾಖೆಗಳ ಸಂಖ್ಯೆಯಲ್ಲಿ ಏರಿಕೆ:
ಪ್ರಸ್ತುತ ದೇಶದ ವಿವಿಧೆಡೆ 51,570 ಸ್ಥಳಗಳಲ್ಲಿ 83,129 ನಿತ್ಯ ಶಾಖೆಗಳು ನಡೆಯುತ್ತಿವೆ. ಇದು ಹಿಂದಿನ ವರ್ಷಕ್ಕಿಂತ 10 ಸಾವಿರದಷ್ಟು ಹೆಚ್ಚಳಗೊಂಡಿವೆ. ಇದೇ ರೀತಿ 32,147 ಸಾಪ್ತಾಹಿಕ ಮಿಲನ್ ಹಾಗೂ 12,091 ಮಾಸಿಕ ಮಂಡಲಿ ಸೇರಿ ಒಟ್ಟು 1.27 ಲಕ್ಷ ಶಾಖಾ ಸಂಬಂಧಿತ ಚಟುವಟಿಕೆಗಳು ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲಿ ತನ್ನ ಬಲ ಹೆಚ್ಚಿಸಿಕೊಳ್ಳುತ್ತಿರುವ ಆರ್ಎಸ್ಎಸ್, ಗ್ರಾಮೀಣ ಮಂಡಲಗಳಲ್ಲಿ ನಿತ್ಯ ಶಾಖೆಗಳ ಸಂಖ್ಯೆ 30,717ರಿಂದ 58,981ಕ್ಕೆ ಹೆಚ್ಚಳಗೊಂಡಿದೆ.
ಸೇವಾ ಚಟುವಟಿಕೆ ವಿಸ್ತರಣೆ:
ಆರ್ಎಸ್ಎಸ್ ದೇಶದೆಲ್ಲೆಡೆ 89,760 ಸೇವಾ ಚಟುವಟಿಕೆಗಳಲ್ಲಿ ನಿರತವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ 40,920 ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ 17,461ಕ್ಕೆ ವಿಸ್ತರಣೆಗೊಂಡಿದೆ. ಜತೆಗೆ ಗ್ರಾಮ ವಿಕಾಸ ಮತ್ತು ಗೋ ಸಂರಕ್ಷಣಾ ಕಾರ್ಯದ ಮೂಲಕ ಗ್ರಾಮೀಣಾಭಿವೃದ್ಧಿ ಕೆಲಸಗಳು ನಡೆಯುತ್ತಿವೆ.