ಬದಿಯಡ್ಕ: ಶ್ರೀ ರಾಮಾಯಣ ನಮ್ಮೆಲ್ಲರಿಗೂ ಸದಾ ಆದರ್ಶ ಪ್ರಾಯವಾಗಿರುವಂತಹ ಪ್ರಭು ಶ್ರೀರಾಮನ ಜೀವನದ ಚಿತ್ರಣ. ಪ್ರತಿಯೊಂದು ಜೀವಿಯೂ ತಾನು ಹೇಗೆ ಜೀವಿಸಬೇಕು ಎಂಬುದರ ದೃಷ್ಟಾಂತರೂಪವೇ ಶ್ರೀರಾಮಾಯಣ ಎನ್ನಬಹುದು.
ಇತ್ತೀಚೆಗೆ ಕಾರ್ಮಾರು ಶ್ರೀ ಮಹಾವಿಷ್ಣು ದೇಗುಲದ ಬ್ರಹ್ಮ ಕಲಶದ ಎಂಟನೇ ದಿನದ ಸಂದರ್ಭದಲ್ಲಿ ನೃತ್ಯ ವಿದುಷಿ ಯೋಗಿಶ್ವರೀ ಜಯಪ್ರಕಾಶ್ ಪುತ್ತೂರು ಅವರ ಶಿಷ್ಯವೃಂದವು ರಾಮಾಯಣದ ಅವತರಣಿಕೆಯನ್ನು ನೃತ್ಯರೂಪಕದ ಮೂಲಕ ಪ್ರಸ್ತುತಿ ಪಡಿಸಿರುವುದು ರಮಣೀಯವಾಗಿತ್ತು. ಅದ್ಭುತ ವಸ್ತ್ರವಿನ್ಯಾಸಗಳು, ಉತೃಷ್ಟ ಅಭಿನಯ, ರಾಮಾಯಣದ ಚಿತ್ರಣ ಪುನರಾವರ್ತಿಸಿದಂತೆ ನೆರೆದವರ ಮನಸೂರೆಗೊಂಡವು. ಸುಂದರ ದೃಶ್ಯಕಾವ್ಯವನ್ನು ಮನದಣಿಯೆ ಸವಿದವರು ರಾಮಾಯಣದ ಕಾಲಘಟ್ಟದಲ್ಲಿರುವೆವೋ ಎಂಬಂತೆ ಆನಂದಭಾಷ್ಪ ಸುರಿಸುತ್ತಾ ಇಡೀ ರೂಪಕವನ್ನು ಮನದುಂಬಿಕೊಂಡಿದ್ದರು. ಪ್ರತಿಯೊಂದು ಪಾತ್ರಕ್ಕೂ ಜೀವತುಂಬಿದ ಶಿಷ್ಯವೃಂದ, ಸಂಗೀತ ಗಾಯನದ ಮೂಲಕ ಹಿಮ್ಮೇಳ, ಅತ್ಯದ್ಭುತವಾದ ಬೆಳಕಿನ ವ್ಯವಸ್ಥೆಯ ಮೂಲಕ ಕಾರ್ಯಕ್ರಮ ಯಶಸ್ಸನ್ನು ಕಂಡಿತು. ವೀಕ್ಷಕರ ಮರೆಯಲಾಗದ ಸವಿನೆನಪಾಗಿ ಉಳಿದÀ ಇಂತಹ ಪ್ರಯತ್ನ ಶ್ಲಾಘನೀಯವಾಗಿ ಪ್ರೇಕ್ಷಕರ ಶ್ಲಾಘನೆಗೆ ಕಾರಣವಾಯಿತು. ಪುತ್ತೂರು ನಂದೀವನದಲ್ಲಿ ಪ್ರಥಮ ಪ್ರದರ್ಶನವನ್ನು ನೀಡಲಾಗಿತ್ತು.
ಇದೀಗ ಕಾರ್ಮಾರಿನಲ್ಲಿ ನೀಡಿದ ಎರಡನೇ ಪ್ರದರ್ಶನವು ಭರತನಾಟ್ಯ ಹಾಗೂ ನೃತ್ಯರೂಪಕ ಶ್ರೀರಾಮ ಪುನರಾಗಮನದೊಂದಿಗೆ ಜರುಗಿತು. ನೃತ್ಯ ರೂಪಕದ ಸಾಹಿತ್ಯವನ್ನು ಡಾ. ರಾಜೇಶ್ ಬೆಜ್ಜಂಗಳ ರಚಿಸಿದ್ದು ನಟವಾಂಗದಲ್ಲಿ ಸಹಕರಿಸಿದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ರೂಪಕದ ನೃತ್ಯ ನಿರ್ದೇಶನವನ್ನು ಮಾಡಿದ್ದಾರೆ. ರಾಗ ಸಂಯೋಜನೆ ಮತ್ತು ಹಾಡುಗಾರಿಕೆಯಲ್ಲಿ ವಿದ್ವಾನ್ ವೆಳ್ಳಿಕ್ಕೋತ್ ವಿಷ್ಣು ಭಟ್, ವಸಂತ ಕುಮಾರ್ ಗೋಸಾಡ, ಸವಿತಾ ಅವಿನಾಶ್ ಪುತ್ತೂರು, ಮೃದಂಗದಲ್ಲಿ ಶ್ರೀ ಗಿತೇಶ್ ಕುಮಾರ್ ನೀಲೇಶ್ವರ, ಕೊಳಲಿನಲ್ಲಿ ರಾಜಗೋಪಾಲ್ ನೀಲೇಶ್ವರ, ಕೀಬೋರ್ಡ್ನಲ್ಲಿ ಬಾಬಣ್ಣ ಪುತ್ತೂರು, ರಿದಂನಲ್ಲಿ ರವಿಕಾಂತ್ ಮಾನ್ಯ ಸಹಕರಿಸಿದರು. ಪ್ರಸಾದನದಲ್ಲಿ ಭಾವನಾ ಕಲಾ ಆಟ್ರ್ಸ್ ಪುತ್ತೂರು ಸಹಕರಿಸಿದ್ದರು.