ಲಖನೌ: ಉತ್ತರ ಪ್ರದೇಶದ ಹಾಥರಸ್ನಲ್ಲಿ ಕಳೆದ ಜುಲೈನಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಭಾರಿ ಜನದಟ್ಟಣೆ, ಸಂಘಟಕರ ಅಸಮರ್ಪಕ ನಿರ್ವಹಣೆ ಮತ್ತು ಅನುಮತಿ ನೀಡುವಲ್ಲಿ ಅಧಿಕಾರಿಗಳು ತೋರಿರುವ ನಿರ್ಲಕ್ಷ್ಯ ಪ್ರಮುಖ ಕಾರಣ ಎಂದು ಈ ಪ್ರಕರಣದ ತನಿಖೆ ನಡೆಸಿದ ನ್ಯಾಯಾಂಗ ಆಯೋಗ ಹೇಳಿದೆ.
ಉತ್ತರ ಪ್ರದೇಶ ಸರ್ಕಾರಕ್ಕೆ ಸಲ್ಲಿಸಿರುವ ಈ ವರದಿಯನ್ನು ಬುಧವಾರ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಕಾರ್ಯಕ್ರಮಕ್ಕೆ ಕಲ್ಪಿಸಿದ್ದ ಮೂಲಸೌಕರ್ಯಗಳಲ್ಲಿನ ಹಲವು ಸುರಕ್ಷತಾ ಲೋಪಗಳನ್ನು ಎತ್ತಿ ತೋರಿಸಲಾಗಿದೆ. ಅಲ್ಲದೆ, ಕಾರ್ಯಕ್ರಮಕ್ಕೆ ಸೇರಿದ್ದ ಜನರ ನಿರ್ಗಮನಕ್ಕೆ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ ಎನ್ನುವ ಬಗ್ಗೆಯೂ ಬೊಟ್ಟು ಮಾಡಲಾಗಿದೆ.
ಕ್ರಿಮಿನಲ್ ಪಿತೂರಿಯ ಸಾಧ್ಯತೆಯನ್ನು ವರದಿಯಲ್ಲಿ ತಳ್ಳಿಹಾಕಿಲ್ಲ. ವಿಶೇಷ ತನಿಖಾ ತಂಡ (ಎಸ್ಐಟಿ) ಆಳವಾದ ತನಿಖೆ ನಡೆಸಬೇಕೆಂದೂ ಶಿಫಾರಸು ಮಾಡಿದೆ.
ಕಾರ್ಯಕ್ರಮಕ್ಕೆ 80,000 ಜನರು ಸೇರುವ ನಿರೀಕ್ಷೆಯಿತ್ತು. ಆದರೆ, ವಾಸ್ತವವಾಗಿ ಸೇರಿದವರ ಸಂಖ್ಯೆ 2.5 ಲಕ್ಷದಿಂದ 3 ಲಕ್ಷದಷ್ಟಿತ್ತು. ಧಾರ್ಮಿಕ ಪ್ರವಚನ ಮುಗಿದಾಗ ಇಡೀ ಜನಸಮೂಹಕ್ಕೆ ಏಕಕಾಲದಲ್ಲಿ ನಿರ್ಗಮಿಸಲು ಅನುವು ಮಾಡಿಕೊಡಲಾಗಿದೆ. ಈ ಅವ್ಯವಸ್ಥೆ ಕಾಲ್ತುಳಿತಕ್ಕೆ ಪ್ರಮುಖ ಕಾರಣವಾಗಿದೆ. ಕಾರ್ಯಕ್ರಮ ಆಯೋಜಿಸಿದ್ದ ಸ್ಥಳವನ್ನು ಅಧಿಕಾರಿಗಳು ಖುದ್ದು ಪರಿಶೀಲಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ಸಂಘಟಕ ದೇವ್ ಪ್ರಕಾಶ್ ಮಧುಕರ್ ಅವರು ಕಾರ್ಯಕ್ರಮಕ್ಕೆ 80,000 ಜನರನ್ನು ಸೇರಿಸಲು ಅನುಮತಿ ಕೋರಿ, 2024ರ ಜೂನ್ 18ರಂದು ಸಿಕಂದರಾವ್ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ಗೆ ಅರ್ಜಿ ಸಲ್ಲಿಸಿದ್ದರು. ಸಿಕಂದರಾವ್ ಕ್ಷೇತ್ರದ ಶಾಸಕ ವೀರೇಂದ್ರ ಸಿಂಗ್ ರಾಣಾ ಸೇರಿ ಸ್ಥಳೀಯ ಪ್ರತಿನಿಧಿಗಳ ಬೆಂಬಲ ಪತ್ರಗಳನ್ನು ಇದರ ಜತೆಗೆ ಲಗತ್ತಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಸಿಕಂದರಾವ್ ಅವರ ಫುಲ್ರೈ ಗ್ರಾಮದಲ್ಲಿ ನಡೆದ ಕಾಲ್ತುಳಿತದ ನಂತರ ಸ್ಥಳೀಯ ಪೊಲೀಸರು ದಾಖಲಿಸಿದ ಎಫ್ಐಆರ್ನಲ್ಲಿ ಧರ್ಮಪ್ರವಚಕ ಸೂರಜ್ಪಾಲ್ (ನಿಜವಾದ ಹೆಸರು) ಅವರನ್ನು ಆರೋಪಿಯಾಗಿ ಉಲ್ಲೇಖಿಸಿಲ್ಲ.
ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಎಂದೇ ಗುರುತಿಸಿಕೊಂಡಿರುವ ನಾರಾಯಣ ಸರ್ಕಾರ್ ಹರಿ ಅವರ ಧರ್ಮಪ್ರವಚನಕ್ಕಾಗಿ ಕಳೆದ ವರ್ಷ ಜುಲೈ 2ರಂದು ಏರ್ಪಡಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ, 121 ಜನ ಮೃತಪಟ್ಟಿದ್ದರು.
ಪ್ರಕರಣದ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್ ಶ್ರೀವಾತ್ಸವ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ನ್ಯಾಯಾಂಗ ಆಯೋಗವನ್ನು ರಚಿಸಿತ್ತು. ಐಎಎಸ್ ಅಧಿಕಾರಿ ಹೇಮಂತ್ ರಾವ್, ಮಾಜಿ ಐಪಿಎಸ್ ಅಧಿಕಾರಿ ಭವೇಶ್ ಕುಮಾರ್ ಇದರ ಸದಸ್ಯರಾಗಿದ್ದರು.