ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಅವರು ಕೇಂದ್ರ ಸಚಿವ ಮತ್ತು ಬಿಜೆಪಿಯ 'ಚಾಣಕ್ಯ' ಅಮಿತ್ ಶಾ ಅವರನ್ನು ಮಂಗಳವಾರ ನವದೆಹಲಿಯಲ್ಲಿ ಭೇಟಿ ಮಾಡಿ, ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವ ಬಗ್ಗೆ ಚರ್ಚೆ ನಡೆಸಿದ್ದಾರೆ.
2023ರ ಚುನಾವಣೆಯಲ್ಲಿ ಕೆಲವು ಗೊಂದಲಗಳಿಂದ ಮೈತ್ರಿ ಕಡಿದುಕೊಂಡಿದ್ದ ಈ ಎರಡು ಪಕ್ಷಗಳು ಮುಂಬರುವ ಚುನಾವಣೆಗೆ ಮತ್ತೆ ಮೈತ್ರಿ ಮಾಡಿಕೊಳ್ಳಬಹುದು, ಇದಕ್ಕೆ ಎಐಎಡಿಎಂಕೆ ಅಖಾಡ ಸಿದ್ಧಪಡಿಸಿಕೊಳ್ಳುತ್ತಿದೆ ಎನ್ನುವ ಚರ್ಚೆಯನ್ನು ಈ ಬೆಳವಣಿಗೆ ಹುಟ್ಟುಹಾಕಿದೆ.
ವಿಧಾನಸಭಾ ಚುನಾವಣೆಗೆ ಒಂದು ವರ್ಷ ಬಾಕಿ ಇದ್ದು, ಲೋಕಸಭೆ ಕ್ಷೇತ್ರಗಳ ಮರು ವಿಂಗಡಣೆ ಮತ್ತು ದ್ವಿಭಾಷಾ ನೀತಿಯಂತಹ ವಿವಾದಾತ್ಮಕ, ಭಾವನಾತ್ಮಕ ವಿಷಯಗಳನ್ನಿಟ್ಟುಕೊಂಡು ಡಿಎಂಕೆ ಹೋರಾಟ ನಡೆಸಲು ಪ್ರಜ್ಞಾಪೂರ್ವಕ ಪ್ರಯತ್ನ ಮಾಡುತ್ತಿರುವಾಗಲೇ ಪಳನಿಸ್ವಾಮಿ ಅವರು ಶಾ ಅವರನ್ನು ಭೇಟಿ ಮಾಡಿರುವುದು ತಮಿಳುನಾಡಿನಲ್ಲಿ ರಾಜಕೀಯ ಸಂಚಲನ ಮೂಡಿಸಿದೆ.
2019ರಲ್ಲಿ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದ ಎಐಎಡಿಎಂಕೆ, ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಕೆ. ಅಣ್ಣಾಮಲೈ ಅವರನ್ನು ದೂಷಿಸಿ, 2023ರ ಸೆಪ್ಟೆಂಬರ್ನಲ್ಲಿ ಎನ್ಡಿಎನಿಂದ ಹೊರನಡೆದಿತ್ತು.
ಎಐಎಡಿಎಂಕೆ ಜೊತೆಗಿನ ಮೈತ್ರಿಯನ್ನು ವಿರೋಧಿಸಿದ್ದ ಅಣ್ಣಾಮಲೈ, ಈಗ ಡಿಎಂಕೆಗೆ ಪ್ರಬಲ ವಿರೋಧ ಒಡ್ಡುವ ಅಗತ್ಯದ ಬಗ್ಗೆಯೂ ಪಕ್ಷದ ಹೈಕಮಾಂಡ್ಗೆ ಮನವರಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
'ಅಮಿತ್ ಶಾ ಅವರ ಭೇಟಿಯ ಮುಖ್ಯ ಉದ್ದೇಶ ಡಿಎಂಕೆ ಸರ್ಕಾರದ ವಿರುದ್ಧ ದೂರುಗಳನ್ನು ನೀಡುವುದಾಗಿತ್ತು. ಆದರೆ, ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆಯೂ ಪ್ರಮುಖವಾಗಿ ಚರ್ಚೆಯಾಗಿವೆ' ಎಂದು ಮೂಲಗಳು ತಿಳಿಸಿವೆ.
'ತಮಿಳುನಾಡಿನಲ್ಲಿ ಅಣ್ಣಾಮಲೈ ನಾಯಕತ್ವದಲ್ಲೇ ಪಕ್ಷ ಸಂಘಟನೆಯಾಗಲಿದೆ. ಅಗತ್ಯವಿದ್ದರೆ, ಎಐಎಡಿಎಂಕೆ ಜತೆಗೆ ವ್ಯವಹರಿಸಲು ಚುನಾವಣೆ ವೇಳೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗುತ್ತದೆ' ಎಂದು ಮೂಲಗಳು ಹೇಳಿವೆ.