ನವದೆಹಲಿ: ದಂಡಿ ಯಾತ್ರೆಗೆ (ಉಪ್ಪಿನ ಸತ್ಯಾಗ್ರಹ) ಇಂದಿಗೆ 95 ವರ್ಷ. ದಂಡಿ ಸತ್ಯಾಗ್ರಹವನ್ನು ಭಾರತದ ಸ್ವಾತಂತ್ರ್ಯ ಹೋರಾಟದ ನಿರ್ಣಾಯಕ ಅಧ್ಯಾಯ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಣ್ಣಿಸಿದರು.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಭಾಗವಹಿಸಿದ ಎಲ್ಲರಿಗೂ ನನ್ನ ನಮನಗಳು ಎಂದು ತಿಳಿಸಿದ್ದಾರೆ.
'ಈ ಯಾತ್ರೆಯು ದೇಶದಾದ್ಯಂತ ಸ್ವಾವಲಂಬನೆ ಮತ್ತು ಸ್ವಾತಂತ್ರ್ಯದ ಚಳುವಳಿಯನ್ನು ಹುಟ್ಟುಹಾಕಿತು. ದಂಡಿ ಮೆರವಣಿಗೆಯಲ್ಲಿ ಭಾಗವಹಿಸಿದ ಎಲ್ಲರ ಧೈರ್ಯ, ತ್ಯಾಗ, ಸತ್ಯ ಮತ್ತು ಅಹಿಂಸೆ ತತ್ವಗಳ ಬಗೆಗಿನ ಅಚಲ ಬದ್ಧತೆ ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾದ್ದದ್ದು' ಎಂದು ಮೋದಿ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
'ದಂಡಿ ಯಾತ್ರೆಗೆ ಭಾರಿ ಜನಬೆಂಬಲ ವ್ಯಕ್ತವಾಗಿತ್ತು. ಇದನ್ನು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಒಂದು ಮಹತ್ವದ ತಿರುವು' ಎಂದು ಪರಿಗಣಿಸಲಾಗಿದೆ' ಎಂದು ಮೋದಿ ಹೇಳಿದ್ದಾರೆ.
ಬ್ರಿಟಿಷರು ಹೇರಿದ್ದ ಉಪ್ಪಿನ ಮೇಲಿನ ತೆರಿಗೆ ವಿರುದ್ಧ ಗಾಂಧೀಜಿ ನೇತೃತ್ವದಲ್ಲಿ ಪ್ರತಿಭಟನೆ ಆರಂಭಸಲಾಗಿತ್ತು. ಈ ದಿನಂದಂದು (ಮಾರ್ಚ್ 12) ಸಬರಮತಿ ಆಶ್ರಮದಿಂದ ದಂಡಿಗೆ ಪಾದಯಾತ್ರೆಯನ್ನು ಪ್ರಾರಂಭಿಸಿದ್ದರು.