ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಕಲಾಪದಲ್ಲಿ ಮಾತನಾಡಲು ಅವಕಾಶ ನಿರಾಕರಣೆ, 2019ರಿಂದ ಈವರೆಗೆ ಉಪ ಸ್ಪೀಕರ್ ನೇಮಕ ಮಾಡದಿರುವುದು ಹಾಗೂ ಸಂಸದೀಯ ಸಮಿತಿಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸೇರಿದಂತೆ ಕೇಂದ್ರ ಸರ್ಕಾರದ ಧೋರಣೆ ವಿರೋಧಿಸಿ 'ಇಂಡಿಯಾ' ಮೈತ್ರಿಕೂಟದ ಸದಸ್ಯರ ನಿಯೋಗವು ಗುರುವಾರ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಸಲ್ಲಿಸಿತು.
ಕಾಂಗ್ರೆಸ್, ಸಮಾಜವಾದಿ ಪಕ್ಷ, ಟಿಎಂಸಿ, ಡಿಎಂಕೆ, ಶಿವಸೇನಾ (ಯುಬಿಟಿ), ಮುಸ್ಲಿಂ ಲೀಗ್, ಆರ್ಎಲ್ಪಿ, ಸಿಪಿಐ(ಎಂ), ಸಿಪಿಐ, ಎಂಡಿಎಂಕೆ ಮತ್ತು ಕೇರಳ ಕಾಂಗ್ರೆಸ್ ಪಕ್ಷದ ಸಂಸದರು ಈ ನಿಯೋಗದಲ್ಲಿದ್ದರು.
ಪ್ರಮುಖ ಖಾತೆಗಳಿಗೆ ಹಂಚಿಕೆಯಾದ ಅನುದಾನವನ್ನು ಚರ್ಚೆಯಿಂದ ಹೊರಗಿಟ್ಟಿರುವುದು ಮತ್ತು ಪ್ರತಿಪಕ್ಷಗಳ ಸದಸ್ಯರು ಕಲಾಪದಲ್ಲಿ ಮಾತನಾಡುವಾಗ ಮೈಕ್ರೊಫೋನ್ಗಳನ್ನು ಬಂದ್ ಮಾಡುವುದು ಸೇರಿದಂತೆ 12 ಅಂಶಗಳ ಕುರಿತು ಸ್ಪೀಕರ್ ಜೊತೆ ಇಂಡಿಯಾ ಮೈತ್ರಿಕೂಟದ ಸದಸ್ಯರು ಚರ್ಚಿಸಿದರು.
ಸಂಸದೀಯ ಸ್ಥಾಯಿ ಸಮಿತಿ ವರದಿಗಳಲ್ಲಿ ಸ್ಪೀಕರ್ ಕಚೇರಿ ಹಸ್ತಕ್ಷೇಪ ಮಾಡುತ್ತಿದೆ. ಸಮಿತಿಯ ವರದಿಯಲ್ಲಿನ ಅಂಶಗಳನ್ನು ಸರಿಪಡಿಸುವಂತೆ ಸ್ಪೀಕರ್ ಕಚೇರಿಯು ಸಲಹೆ ನೀಡುವ ಮೂಲಕ ಸ್ಥಾಯಿ ಸಮಿತಿಯ ಸ್ವಾಯತತ್ತೆಗೆ ಧಕ್ಕೆ ತರಲಾಗುತ್ತಿದೆ. ಸಂಸತ್ ಟಿ.ವಿಯಲ್ಲಿ ಪ್ರತಿಪಕ್ಷಗಳ ಸಂಸದರು ಮಾತನಾಡುವುದನ್ನು ತೋರಿಸುತ್ತಿಲ್ಲ ಎಂದು ಹೇಳಿದರು. ಸಮಿತಿಗಳ ಅಧ್ಯಕ್ಷರನ್ನು ಆಯ್ಕೆ ಮಾಡುವ ವೇಳೆ ಪ್ರತಿಪಕ್ಷದ ನಾಯಕರ ಸಲಹೆ ಪಡೆಯದ ಬಗ್ಗೆಯೂ ನಿಯೋಗವು ಕಳವಳ ವ್ಯಕ್ತಪಡಿಸಿತು.
'ಈ ಎಲ್ಲ ಬೆಳವಣಿಗೆಗಳು ಹೆಚ್ಚು ಕಳವಳಕಾರಿಯಾಗಿದ್ದು, ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಸಮಗ್ರತೆಯನ್ನು ಎತ್ತಿಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು' ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
'ಈ ಸದನದ ಘನತೆಯನ್ನು ಎತ್ತಿಹಿಡಿಯುವಂತೆ ಕಲಾಪದ ನಿಯಮಗಳನ್ನು ಪಾಲಿಸಿ' ಎಂದು ಸ್ಪೀಕರ್ ಓಂ ಬಿರ್ಲಾ ಅವರು ರಾಹುಲ್ ಗಾಂಧಿ ಅವರಿಗೆ ಬುಧವಾರ ತಾಕೀತು ಮಾಡಿದ್ದರು.