ಲಷ್ಕರ್-ಎ-ತಯಬಾ (ಎಲ್ಇಟಿ) ಸಂಘಟನೆಯ ಪ್ರಮುಖ ನಾಯಕ ಹಾಗೂ ಮೋಸ್ಟ್ ವಾಂಟೆಡ್ ಉಗ್ರರಲ್ಲಿ ಒಬ್ಬನಾದ ಫೈಸಲ್ ನದೀಮ್ ಅಲಿಯಾಸ್ ಅಬು ಕ್ವತಲ್, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಝೇಲಂ ಜಿಲ್ಲೆಯ ದಿನಾ ಪ್ರದೇಶದಲ್ಲಿ ಶನಿವಾರ ರಾತ್ರಿ ಹತ್ಯೆಯಾಗಿದ್ದಾನೆ. ಈ ಬಗ್ಗೆ 'ಇಂಡಿಯಾ ಟುಡೇ' ವರದಿ ಮಾಡಿದೆ.
ಕ್ವತಲ್ ರಕ್ಷಣೆಯ ಹೊಣೆಯನ್ನು ಪಾಕಿಸ್ತಾನ ಸೇನೆಯೇ ಹೊತ್ತಿತ್ತು. ಎಲ್ಇಟಿಯೂ ಹೆಚ್ಚುವರಿ ಭದ್ರತೆ ಒದಗಿಸಿತ್ತು. ಆದಾಗ್ಯೂ, ಆತನ ಮೇಲೆ ಶನಿವಾರ ರಾತ್ರಿ 7ರ ಸುಮಾರಿಗೆ ಅಪರಿಚಿತರು ದಾಳಿ ಮಾಡಿದ್ದಾರೆ. ಅವರು, 15-20 ಸುತ್ತು ಗುಂಡು ಹಾರಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕ್ವತಲ್, ಲಷ್ಕರ್-ಎ-ತಯಬಾ ಸಂಸ್ಥಾಪಕ ಹಾಗೂ 2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ನ ಸಂಬಂಧಿ ಹಾಗೂ ಸಹಚರ. ಆತನನ್ನು ಸಂಘಟನೆಯ ಮುಖ್ಯ ಕಾರ್ಯಾಚರಣಾ ಕಮಾಂಡರ್ ಆಗಿ ನೇಮಿಸಿದ್ದ ಸಯೀದ್, ಕಾಶ್ಮೀರದಲ್ಲಿ ದಾಳಿಗಳನ್ನು ನಡೆಸಲು ಆದೇಶಿಸಿದ್ದ.
ಲಷ್ಕರ್-ಎ-ತಯಬಾ ಸಂಸ್ಥಾಪಕ ಹಾಗೂ ಮುಂಬೈ ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಡಾಂಗ್ರಿಯಲ್ಲಿ 2023ರ ಜನವರಿಯ 1ರಂದು ನಡೆದ ದಾಳಿಗೆ ಸಂಬಂಧಿಸಿದಂತೆ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕ್ವತಲ್ ವಿರುದ್ಧ ಆರೋಪ ಪಟ್ಟಿ ದಾಖಲಿಸಿದೆ. ಆ ದಿನ ಉಗ್ರರು ಏಕಾಏಕಿ ನಡೆಸಿದ ಗುಂಡಿನ ಈ ದಾಳಿಯಲ್ಲಿ 7 ನಾಗರಿಕರು ಮೃತಪಟ್ಟು, 13 ಮಂದಿ ಗಾಯಗೊಂಡಿದ್ದರು.
ಸಂಘಟನೆಗೆ ಉಗ್ರರ ಸೇರ್ಪಡೆ ಹಾಗೂ ಭಾರತದ ಗಡಿಯುದ್ದಕ್ಕೂ ನಿಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕ್ವತಲ್, ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರನ್ನು ಗುರಿಯಾಗಿಸಿ, ಅದರಲ್ಲೂ ಅಲ್ಪಸಂಖ್ಯಾತರು, ಭದ್ರತಾ ಸಿಬ್ಬಂದಿ ಮೇಲೆ ದಾಳಿ ಸಂಘಟಿಸುತ್ತಿದ್ದ.
2002-03ರಲ್ಲಿ ಭಾರತದ ಗಡಿ ಪ್ರವೇಶಿಸಿದ್ದ ಕ್ವತಲ್ಗೆ, ಅಲಿ, ಹಬೀಬುಲ್ಲಾ, ನೌಮನ್, ಮೊಹಮ್ಮದ್ ಕ್ವಾಸಿಂ ಎಂಬಿತ್ಯಾದಿ ಹೆಸರುಗಳಿವೆ.