ನವದೆಹಲಿ: 'ಎರಡನೇ ಅವಧಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಡೊನಾಲ್ಡ್ ಟ್ರಂಪ್ ಅವರಲ್ಲಿ ಭಾರಿ ಸಿದ್ಧತೆ ಕಾಣುತ್ತಿದೆ. ತಮ್ಮ ಗುರಿ ಸಾಧನೆಗೆ ಅಗತ್ಯವಿರುವ ನೀಲನಕ್ಷೆ, ಸ್ಪಷ್ಟತೆಯೊಂದಿಗೆ ಮುಂದಡಿ ಇಡುತ್ತಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ನನ್ನ ಮತ್ತು ಟ್ರಂಪ್ ನಡುವಿನ ಸ್ನೇಹಕ್ಕೆ ಪರಸ್ಪರರಲ್ಲಿನ ನಂಬಿಕೆಯೇ ಆಧಾರ. ರಾಷ್ಟ್ರದ ಹಿತಾಸಕ್ತಿಗಳೇ ಎಲ್ಲಕ್ಕಿಂತ ಮಿಗಿಲು ಎಂಬುದರಲ್ಲಿಯೇ ನಮ್ಮಿಬ್ಬರಿಗೆ ವಿಶ್ವಾಸ' ಎಂದೂ ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ (ಎ.ಐ) ಸಂಶೋಧಕ ಹಾಗೂ ವಿಜ್ಞಾನಿ ಲೆಕ್ಸ್ ಫ್ರಿಡ್ಮನ್ ಅವರ ಪಾಡ್ಕಾಸ್ಟ್ಗೆ ನೀಡಿರುವ ಸಂದರ್ಶನದಲ್ಲಿ ಅವರು ಹಲವು ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
'ಟ್ರಂಪ್ ಧೈರ್ಯವಂತ ಹಾಗೂ ಅಮೆರಿಕದ ಒಳಿತಾಗಿ ಟ್ರಂಪ್ ಅವರು ಹಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಅವರೊಂದಿಗೆ ಬಲಿಷ್ಠ ತಂಡ ಇದೆ. ಟ್ರಂಪ್ ಅವರ ಮುನ್ನೋಟಗಳನ್ನು ಅನುಷ್ಠಾನಗೊಳಿಸುವ ಸಾಮರ್ಥ್ಯ ಈ ತಂಡ ಹೊಂದಿದೆ' ಎಂದು ಮೋದಿ ಹೇಳಿದ್ದಾರೆ.
ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್, ರಾಷ್ಟ್ರೀಯ ಗುಪ್ತಚರ ಸಂಸ್ಥೆ ನಿರ್ದೇಶಕಿ ತುಳಸಿ ಗಬಾರ್ಡ್, ಉದ್ಯಮಿ ಇಲಾನ್ ಮಸ್ಕ್ ಹಾಗೂ ವಿವೇಕ್ ರಾಮಸ್ವಾಮಿ ಅವರೊಂದಿಗಿನ ಭೇಟಿಯನ್ನು ಕೂಡ ಅವರು ಪ್ರಸ್ತಾಪಿಸಿದ್ದಾರೆ.
ಪಾಡ್ಕಾಸ್ಟ್ಗಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಲೆಕ್ಸ್ ಫ್ರಿಡ್ಮನ್ ಭಾನುವಾರ ಸ್ವಾಗತಿಸಿದರು -ಪಿಟಿಐ ಚಿತ್ರ
ಪ್ರಧಾನಿ ಮೋದಿ ಹೇಳಿದ್ದು...
ಗುಜರಾತ್ ಗಲಭೆಗಳು
l ಗುಜರಾತ್ನಲ್ಲಿ 2002ರಲ್ಲಿ ಸಂಭವಿಸಿದ ಗೋಧ್ರೋತ್ತರ ಗಲಭೆಗಳ ಕುರಿತು ನನ್ನ ರಾಜಕೀಯ ವಿರೋಧಿಗಳು ಸುಳ್ಳು ಸಂಕಥನ ಸೃಷ್ಟಿಸಿ, ವ್ಯಾಪಕವಾಗಿ ಹಬ್ಬಿಸಿದ್ದರು. ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ಅವರು ಹೀಗೆ ಮಾಡಿದ್ದರು
l ಗುಜರಾತ್ನಲ್ಲಿ ಸಂಭವಿಸಿದ್ದ ದೊಡ್ಡ ಪ್ರಮಾಣದ ಗಲಭೆಗಳವು ಎಂಬ ಗ್ರಹಿಕೆ ಕೂಡ ತಪ್ಪು ಮಾಹಿತಿ ಪ್ರಚುರಪಡಿಸುವ ಯತ್ನವಾಗಿತ್ತು
l 2002ಕ್ಕೂ ಮೊದಲು ಗುಜರಾತ್ನಲ್ಲಿ 250ಕ್ಕೂ ಹೆಚ್ಚು ಗಲಭೆಗಳು ಸಂಭವಿಸಿದ್ದವು. ಕೋಮು ಹಿಂಸಾಚಾರ ಮೇಲಿಂದ ಮೇಲೆ ಸಂಭವಿಸುತ್ತಿದ್ದವು. ಆದರೆ, 2002ರ ನಂತರ ರಾಜ್ಯದಲ್ಲಿ ಇಂತಹ ಒಂದೇ ಒಂದು ಗಲಭೆ ಸಂಭವಿಸಿಲ್ಲ
ಆರ್ಎಸ್ಎಸ್ ಜೊತೆ ನಂಟು
l ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ (ಆರ್ಎಸ್ಎಸ್) ನನಗೆ ಆಳ ನಂಟಿದೆ. ಬದುಕಿನ ಉದ್ಧೇಶ ಹಾಗೂ ನಿಸ್ವಾರ್ಥ ಸೇವೆಯಂತಹ ಮೌಲ್ಯಗಳನ್ನು ಆರ್ಎಸ್ಎಸ್ ನನಗೆ ಕಲಿಸಿಕೊಟ್ಟಿದೆ
l ಸಣ್ಣ ವಯಸ್ಸಿನಲ್ಲಿಯೇ ನಾನು ಆರ್ಎಸ್ಎಸ್ ಶಾಖೆಗಳಿಗೆ ಹೋಗುತ್ತಿದ್ದೆ. ಅಲ್ಲಿ ಹಾಡುತ್ತಿದ್ದ ದೇಶಭಕ್ತಿ ಗೀತೆಗಳು ನನ್ನ ಮೇಲೆ ಅಗಾಧ ಪ್ರಭಾವ ಬೀರಿದ್ದವು
l ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಆರ್ಎಸ್ಎಸ್ ಅದ್ಭುತ ಸೇವೆ ಮಾಡುತ್ತಿದೆ
l 'ಜಗತ್ತಿನ ಕಾರ್ಮಿಕರೇ ಒಂದಾಗಿ' ಎಂದು ಎಡಪಂಥೀಯ ಸಂಘಟನೆಗಳು ಹೇಳಿದರೆ, 'ಕಾರ್ಮಿಕರೇ, ಜಗತ್ತನ್ನು ಒಂದುಗೂಡಿಸಿ' ಎಂಬುದು ಆರ್ಎಸ್ಎಸ್ನ ಧ್ಯೇಯವಾಕ್ಯ
'ಮಹಾತ್ಮ ಗಾಂಧಿ ಮಹಾನ್ ನಾಯಕ'
l ಮಹಾತ್ಮ ಗಾಂಧೀಜಿಗೆ ಜನರ ಶಕ್ತಿಯ ಅರಿವಿತ್ತು. ಅವರು, ಸ್ವಾತಂತ್ರ್ಯ ಸಂಗ್ರಾಮವನ್ನು ಜನಾಂದೋಲನವಾಗಿ ಪರಿವರ್ತಿಸಿದರು
l ಗಾಂಧೀಜಿ 20ನೇ ಶತಮಾನದ ದೊಡ್ಡ ನಾಯಕರು ಮಾತ್ರವಲ್ಲ, ಬರುವ ಶತಮಾನಗಳ ನಾಯಕರೂ ಆಗಿದ್ದಾರೆ
l ಜನರ ಪಾಲ್ಗೊಳ್ಳುವಿಕೆಗೆ ಅವರು ಒತ್ತು ನೀಡುತ್ತಿದ್ದರು. ಹೀಗಾಗಿ ಅವರು ಕೈಗೊಂಡ ಯಾವುದೇ ಕಾರ್ಯಕ್ರಮ
ವಾದರೂ ಭಾರಿ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತೆ ಮಾಡಲು ಶ್ರಮಿಸುತ್ತಿದ್ದರು.
ಪಾಕ್ ಜೊತೆ ಸಂಬಂಧ
l ಪಾಕಿಸ್ತಾನ ಜೊತೆಗಿನ ಸಂಬಂಧ ಸುಧಾರಿಸಿ, ಶಾಂತಿ ಸ್ಥಾಪನೆಗೆ ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾಗಿವೆ. ಪ್ರತಿ ಬಾರಿಯೂ ಭಾರತಕ್ಕೆ ಪಾಕಿಸ್ತಾನ ವಂಚನೆ ಮಾಡಿದೆ, ಹಗೆತನ ಸಾಧಿಸಿದೆ
l ಸಂಕಷ್ಟ, ಅಶಾಂತಿ ಹಾಗೂ ನಿರಂತರ ಭಯೋತ್ಪಾದಕ ಕೃತ್ಯಗಳಿಂದ ಪಾಕಿಸ್ತಾನದ ಜನತೆ ಕೂಡ ರೋಸಿ ಹೋಗಿದ್ದು, ಅವರು ಕೂಡ ದೇಶದಲ್ಲಿ ಶಾಂತಿ ನೆಲಸುವುದನ್ನು ಬಯಸುತ್ತಿರಬಹುದು
'ಚೀನಾ ಜತೆಗಿನ ಸ್ಪರ್ಧೆ ಸಂಘರ್ಷವಾಗಬಾರದು'
l ಭಾರತ ಮತ್ತು ಚೀನಾ ನಡುವೆ ಭಿನ್ನಾಭಿಪ್ರಾಯಗಳಿರುವುದು ಸಹಜ. ಎರಡು ನೆರೆ ರಾಷ್ಟ್ರಗಳ ಹಿತಾಸಕ್ತಿಗಳ ರಕ್ಷಣೆ ಮತ್ತು ಜಾಗತಿಕ ಸ್ಥಿರತೆ ದೃಷ್ಟಿಯಿಂದ ಉಭಯ ದೇಶಗಳ ನಡುವೆ ಗಟ್ಟಿಯಾದ ಸಹಕಾರ ಇದೆ
l ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ) ಉದ್ದಕ್ಕೂ, ಸಂಘರ್ಷಕ್ಕೆ ಮೊದಲು ಇದ್ದ ಸ್ಥಿತಿ ನಿರ್ಮಾಣಕ್ಕೆ ಎರಡೂ ದೇಶಗಳು ಶ್ರಮಿಸುತ್ತಿವೆ
'ಚುನಾವಣಾ ಆಯೋಗ ಕಾರ್ಯವೈಖರಿ ಅದ್ಭುತ'
l ಭಾರತದ ಚುನಾವಣಾ ಆಯೋಗ ಸ್ವತಂತ್ರವಾಗಿ ಹಾಗೂ ತಟಸ್ಥ ಧೋರಣೆಯೊಂದಿಗೆ ಕಾರ್ಯ ನಿರ್ವಹಿಸುತ್ತದೆ
l ವಿಶ್ವದ ದೊಡ್ಡ ಪ್ರಜಾಪ್ರಭುತ್ವದ ಚುನಾವಣೆಗಳನ್ನು ನಿರ್ವಹಿಸುವ ಆಯೋಗದ ಕಾರ್ಯವೈಖರಿ ಕುರಿತು ವಿಶ್ವ ಸಮುದಾಯ ಅಧ್ಯಯನ ಮಾಡುವುದು ಅಗತ್ಯ