ಜೈಪುರ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಹಣ ಪಡೆಯಲು ನಕಲಿ ಖಾತೆಗಳನ್ನು ರಚಿಸಿರುವ ಬೃಹತ್ ಹಗರಣ ರಾಜಸ್ತಾನದಲ್ಲಿ ಬೆಳಕಿಗೆ ಬಂದಿದೆ.
ರಾಜಸ್ಥಾನದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ದೊಡ್ಡ ಹಗರಣ ಬೆಳಕಿಗೆ ಬಂದಿದ್ದು, ಯೋಜನೆಯ ಹಣ ಪಡೆಯಲು ಮುಸ್ಲಿಮರ ಹೆಸರಿನಲ್ಲಿ 29,000 ನಕಲಿ ಖಾತೆಗಳನ್ನು ತೆರೆದಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
2020ರಲ್ಲೇ ಈ ಪ್ರಕರಣ ಬೆಳಕಿಗೆ ಬಂದಿತ್ತಾದರೂ ಆಗ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದರು. ಇದೀಗ ಇದೇ ಹಗರಣ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
29 ಸಾವಿರ ನಕಲಿ ಖಾತೆಗಳಿಗೆ 7 ಕೋಟಿ ವರ್ಗಾವಣೆ
ವಂಚಕರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅಕ್ರಮವಾಗಿ ಹಣ ಪಡೆಯಲು ಸುಮಾರು 29 ಸಾವಿರ ನಕಲಿ ಬ್ಯಾಂಕ್ ಖಾತೆಗಳನ್ನು ರಚಿಸಿದ್ದಾರೆ. ಈ ಖಾತೆಗಳಿಗೆ ಸುಮಾರು 7 ಕೋಟಿ ರೂ ಹಣ ವರ್ಗಾವಣೆಯಾಗಿದೆ ಎಂದು ಹೇಳಲಾಗಿದೆ. ಅಚ್ಚರಿ ಎಂದರೆ ಈ 29 ಸಾವಿರ ಖಾತೆಗಳು ರಾಜಸ್ತಾನದ ಒಂದೇ ಜಿಲ್ಲೆಯಲ್ಲಿ ರಚಿಸಲಾಗಿದೆ.
ಪತ್ತೆಯಾಗಿದ್ದೇ ರೋಚಕ
ರಾಜ್ಯದ ರೈತರಿಗಾಗಿ ಕೇಂದ್ರ ಸರ್ಕಾರ ಕಳುಹಿಸಿದ ಕೋಟ್ಯಂತರ ರೂಪಾಯಿಗಳನ್ನು ಆಯಾ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ ಹೀಗೆ ವರ್ಗಾವಣೆಯಾದ ಹಣ ಪಶ್ಚಿಮ ಬಂಗಾಳ ಮತ್ತು ಬಿಹಾರದ ಖಾತೆಗಳಿಗೆ ವರ್ಗಾವಣೆಯಾಗಿದೆ. ರಾಜಸ್ಥಾನದ ಪಾಲಿ ಜಿಲ್ಲೆಯ ರಾಣಿ, ಮಾರ್ವಾರ್ ಜಂಕ್ಷನ್ ಮತ್ತು ದೇಸುರಿ ತಹಸಿಲ್ಗಳಲ್ಲಿ ಭೌತಿಕ ಪರಿಶೀಲನೆಯ ಸಮಯದಲ್ಲಿ ಈ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಮತ್ತು ಮೂರು ಜಿಲ್ಲೆಯತಹಶೀಲ್ದಾರ್ಗಳು ಆಯಾ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ.
ಜಿಲ್ಲಾಡಳಿತದ ಸೂಚನೆಯ ಮೇರೆಗೆ ನಡೆಸಿದ ಭೌತಿಕ ಪರಿಶೀಲನೆಯ ಸಮಯದಲ್ಲಿ, ಪಾಲಿಯ ದೇಸುರಿಯಲ್ಲಿ 20,000, ರಾಣಿಯಲ್ಲಿ 9,004 ಮತ್ತು ಮಾರ್ವಾರ್ ಜಂಕ್ಷನ್ನಲ್ಲಿ 62 ನಕಲಿ ಖಾತೆಗಳು ಪತ್ತೆಯಾಗಿವೆ. ದೇಸುರಿಯಲ್ಲಿ 1.51 ಕೋಟಿ ರೂ. ಮತ್ತು ರಾಣಿಯಲ್ಲಿ 5.40 ಕೋಟಿ ರೂ. ವರ್ಗಾವಣೆಯಾಗಿದೆ.
ಮೃತರ ಖಾತೆಗಳಿಗೂ ಹಣ ವರ್ಗಾವಣೆ
ಅಚ್ಚರಿ ಎಂದರೆ ಈ ಎಲ್ಲ ಜಿಲ್ಲೆಗಳ ಎಲ್ಲಾ ಪ್ರಕರಣಗಳು ಒಂದೇ ರೀತಿಯದ್ದಾಗಿದ್ದು, ಭೌತಿಕ ಪರಿಶೀಲನೆಯ ನಂತರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಗೆ ಅರ್ಜಿ ಸಲ್ಲಿಸಿದ ಜನರು ಈ ತಹಸಿಲ್ಗಳ ನಿವಾಸಿಗಳಲ್ಲ ಎಂದು ತಿಳಿದುಬಂದಿದೆ. ಇವರು ಕೂಡ ಆದಾಯ ತೆರಿಗೆ ಪಾವತಿಸುವ ಜನರೇ ಆಗಿದ್ದು, ಈ ಪೈಕಿ ಅನೇಕ ಜನರು ಸಾವನ್ನಪ್ಪಿದ್ದಾರೆ ಅಥವಾ ಅವರ ಹೆಸರುಗಳು ಕಂದಾಯ ದಾಖಲೆಗಳಲ್ಲಿ ಇಲ್ಲ ಎಂದು ತಿಳಿದುಬಂದಿದೆ.
ಇದಾದ ನಂತರ, ಮಾರ್ಚ್ ತಿಂಗಳಲ್ಲಿ ಪಾಲಿ ಜಿಲ್ಲೆಯ ದೇಸುರಿ, ರಾಣಿ ಮತ್ತು ಮಾರ್ವಾರ್ ಜಂಕ್ಷನ್ ತಹಸಿಲ್ಗಳಲ್ಲಿ ತಹಸೀಲ್ದಾರರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಈ ನಕಲಿ ಖಾತೆಗಳಿಂದ ದುರುಪಯೋಗಪಡಿಸಿಕೊಂಡ ಹಣವನ್ನು ಹೇಗೆ ಮರುಪಡೆಯಲಾಗುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ವಿಧಾನಸಭೆಯಲ್ಲಿ ಎತ್ತಲಾದ ಪ್ರಶ್ನೆಗೆ ಉತ್ತರ ಬಂದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ಪಾಲಿ ಜಿಲ್ಲಾಧಿಕಾರಿ ಎಲ್.ಎಲ್. ಮಂತ್ರಿ ಅವರ ಪ್ರಕಾರ, 'ಪಾಲಿಯಲ್ಲಿರುವ ಮಾರ್ವಾರ್ ಜಂಕ್ಷನ್, ದೇಸುರಿ ಮತ್ತು ರಾಣಿ ತಹಸೀಲ್ದಾರ್ಗಳು ಘಟನೆಗೆ ಸಂಬಂಧಿಸಿದಂತೆ ಆಯಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿದ್ದೇವೆ. ಇಡೀ ವಿಷಯವನ್ನು ಎಡಿಎಂ ಸೀಲಿಂಗ್ ಅಶ್ವಿನ್ ಕೆ ಅವರು ತನಿಖೆ ನಡೆಸುತ್ತಿದ್ದಾರೆ. ಇದನ್ನು ಪವಾರ್ ಅವರಿಗೆ ಹಸ್ತಾಂತರಿಸಲಾಗಿದೆ. ಪ್ರಸ್ತುತ, ಅವರು ಈ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ ಮತ್ತು ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ವಾಸ್ತವವಾಗಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ, ಕೇಂದ್ರ ಸರ್ಕಾರವು ಅರ್ಹ ರೈತರ ಖಾತೆಗಳಿಗೆ ಪ್ರತಿ ವರ್ಷ 6 ಸಾವಿರ ರೂಪಾಯಿಗಳನ್ನು ಜಮಾ ಮಾಡುತ್ತದೆ. ಈ ಮೊತ್ತವನ್ನು ಮೂರು ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.