ನವದೆಹಲಿ: ಮಣಿಪುರ ಜನಾಂಗೀಯ ಹಿಂಸಾಚಾರ ಕುರಿತು ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಯ ವಿಚಾರಣೆಯನ್ನು ಅಸ್ಸಾಂನ ಗುವಾಹಟಿಯಲ್ಲಿ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಕರಣ ಕುರಿತು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರ ನೇತೃತ್ವದ ಸಮಿತಿಯ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನೇತೃತ್ವದ ತ್ರಿಸದಸ್ಯಪ ಪೀಠವು ಸೋಮವಾರ ಹೇಳಿದೆ.
2023ರ ಆ. 7ರಂದು ರಚಿಸಲಾದ ಈ ಸಮಿತಿಯಲ್ಲಿ ಬಾಂಬೆ ಹೈಕೋರ್ಟ್ನ ನ್ಯಾಯಮೂರ್ತಿ ಶಾಲಿನಿ ಪಿ. ಜೋಶಿ ಮತ್ತು ದೆಹಲಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆಶಾ ಮೆನನ್ ಅವರೂ ಇದ್ದಾರೆ. ಸುಪ್ರೀಂ ಕೋರ್ಟ್ ರಚಿಸಿರುವ ಈ ಸಮಿತಿಯು ಮಣಿಪುರ ಗಲಭೆಯ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬುದರ ಮೇಲ್ವಿಚಾರಣೆಗೆ ನಿರ್ದೇಶಿಸಿದೆ. ಈ ಸಮಿತಿಯ ಅವಧಿಯನ್ನು ಈ ಮೊದಲು 2024ರ ಆ. 5ರವರೆಗೆ ವಿಸ್ತರಿಸಲಾಗಿತ್ತು.
'ಮಣಿಪುರದ ಪರಿಸ್ಥಿತಿಯನ್ನು ಅವಲೋಕಿಸಿ ಮತ್ತು ಕ್ರಮಿನಲ್ ನ್ಯಾಯದ ಆಡಳಿತ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು 27 ಪ್ರಕರಣಗಳನ್ನು ಅಸ್ಸಾಂಗೆ ವರ್ಗಾಯಿಸಲಾಗಿದೆ. ಇವುಗಳಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿದ ಹೀನ ಕೃತ್ಯವನ್ನು ಒಳಗೊಂಡು ಹಲವು ಲೈಂಗಿಕ ದೌರ್ಜನ್ಯ ಪ್ರಕರಣಗಳೂ ಸೇರಿವೆ' ಎಂದಿದೆ.
ಒಟ್ಟು 27 ಪ್ರಕರಣಗಳಲ್ಲಿ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಕೊಲೆಗೆ ಸಂಬಂಧಿಸಿದ 20 ಪ್ರಕರಣಗಳು ಹಾಗೂ ಶಸ್ತ್ರಾಸ್ತ್ರ ಲೂಟಿಗೆ ಸೇರಿದ ಮೂರು ಪ್ರಕರಣಗಳು ಒಳಗೊಂಡಿವೆ. ವರ್ಗಾವಣೆಗೊಂಡ ಪ್ರಕರಣಗಳನ್ನು ನಿರ್ವಹಿಸಲು ಒಂದಕ್ಕಿಂತ ಹೆಚ್ಚು ನ್ಯಾಯಾಂಗ ಇಲಾಖೆ ಅಧಿಕಾರಿಗಳನ್ನು ನೇಮಿಸುವಂತೆ ಗುವಾಹಟಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
'ಧಾವೆದಾರರಿಗೆ ನ್ಯಾಯಾಧೀಶರ ಸಮಿತಿಯು ಹಲವು ವರದಿಗಳನ್ನು ನೀಡಿರುವುದು ಸರಿಯಾದ ಕ್ರಮ ಎಂದು ಪೀಠ ಅಭಿಪ್ರಾಯಪಟ್ಟಿದೆ. ಇದು ಅತಿ ಸೂಕ್ಷ್ಮ ವಿಚಾರವಾದ್ದರಿಂದ ಎಲ್ಲಾ ಪಕ್ಷಗಳು ಬಹಳಾ ಎಚ್ಚರಿಕೆಯಿಂದ ಇರಬೇಕು' ಎಂದು ಪೀಠ ಹೇಳಿತು.
ಪೀಠದ ಅಭಿಪ್ರಾಯಕ್ಕೆ ಸಮ್ಮತಿ ವ್ಯಕ್ತಪಡಿಸಿದ ಮಣಿಪುರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಈ ಪ್ರಕರಣದಲ್ಲಿ ಇತರೆ ಉದ್ದೇಶಗಳಿರುವ ಸಾಧ್ಯತೆ ಇದೆ' ಎಂದರು.