ಮಥುರಾ : ಶಸ್ತ್ರಚಿಕಿತ್ಸೆ ಮಾಡುವುದು ಹೇಗೆ ಎಂಬುದರ ಬಗ್ಗೆ ಯುಟ್ಯೂಬ್ ವಿಡಿಯೊಗಳನ್ನು ನೋಡಿದ್ದ ಮಥುರಾದ ವ್ಯಕ್ತಿಯೊಬ್ಬರು, ಅಪೆಂಡಿಸೈಟಿಸ್ ಸಮಸ್ಯೆಯಿಂದ ಗುಣಮುಖವಾಗುವ ಸಲುವಾಗಿ ತಮ್ಮ ಹೊಟ್ಟೆಯನ್ನು ತಾವೇ ಕತ್ತರಿಸಿಕೊಂಡಿದ್ದಾರೆ.
ಸ್ವಯಂ ಶಸ್ತ್ರಚಿಕಿತ್ಸೆ ಬಳಿಕ ಆರೋಗ್ಯ ಸಮಸ್ಯೆ ಉಲ್ಬಣಿಸಿದ ಕಾರಣ ಬುಧವಾರ ತಮ್ಮ ಸಂಬಂಧಿಯ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುನ್ರಾಖ್ ಗ್ರಾಮದ ರಾಜು ಬಾಬು ಎಂಬಾತನೇ ಶಸ್ತ್ರಚಿಕಿತ್ಸೆ ಮಾಡಿಕೊಂಡ ವ್ಯಕ್ತಿ.
'ಮಾರುಕಟ್ಟೆಯಲ್ಲಿ ದೊರೆತ ಬ್ಲೇಡ್, ಸೂಜಿ ಹಾಗೂ ದಾರವನ್ನು ಬಳಸಿದ್ದ ಬಾಬು, ಹೊಟ್ಟೆಯನ್ನು ಛೇದಿಸಿಕೊಂಡು 11 ಹೊಲಿಗೆಗಳನ್ನು ಹಾಕಿಕೊಂಡಿದ್ದ' ಎಂದು ವೃಂದಾವನ ಜಿಲ್ಲಾಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಕ ಡಾ. ಶಶಿ ರಂಜನ್ ತಿಳಿಸಿದ್ದಾರೆ.
ರಾಜು ಬಾಬು ಸದ್ಯ ಆಗ್ರಾದ ಎನ್ಎನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲವು ವರ್ಷಗಳಿಂದ ಅಪೆಂಡಿಸೈಟಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಬಾಬು, ತಮ್ಮ 14ನೇ ವಯಸ್ಸಿನಲ್ಲಿದ್ದಾಗಲೂ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.