ದ್ವಾರಕಾ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ನಿರ್ದೇಶಕ ಅನಂತ್ ಅಂಬಾನಿ ಭಾನುವಾರ ಮುಂಜಾನೆ ಗುಜರಾತ್ನ ದ್ವಾರಕಾದಲ್ಲಿರುವ ಶ್ರೀ ದ್ವಾರಕಾಧೀಶ ದೇವಸ್ಥಾನಕ್ಕೆ ತಲುಪಿದರು. ಈ ಮೂಲಕ ಮಾರ್ಚ್ 29ರಂದು ಆರಂಭವಾಗಿದ್ದ ಜಾಮ್ನಗರದಿಂದ ಗುಜರಾತ್ ವರೆಗಿನ 170 ಕಿ.ಮೀ ಆಧ್ಯಾತ್ಮಿಕ ಪಾದಯಾತ್ರೆಯನ್ನು ಪೂರ್ಣಗೊಳಿಸಿದರು.
ತಮ್ಮ ಯಾತ್ರೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಭಗವಾನ್ ದ್ವಾರಕಾಧೀಶರಿಗೆ ಕೃತಜ್ಞತೆ ಸಲ್ಲಿಸುತ್ತಾ, ಇದು ನನ್ನದೇ ಆದ ಆಧ್ಯಾತ್ಮಿಕ ಪ್ರಯಾಣ. ನಾನು ಇದನ್ನು ದೇವರ ಹೆಸರಿನಲ್ಲಿ ಆರಂಭಿಸಿದೆ. ಈಗ ದೇವರ ಹೆಸರಿನಲ್ಲೇ ಅಂತ್ಯಗೊಳಿಸುತ್ತಿದ್ದೇನೆ. ನಾನು ದ್ವಾರಕಾಧೀಶರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಆಧ್ಯಾತ್ಮಿಕ ಪ್ರಯಾಣದಲ್ಲಿ ನನ್ನೊಂದಿಗೆ ಸೇರಿದ ಜನರಿಗೆ ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ.
ಅನಂತ್ ಅಂಬಾನಿ ಅವರ ಪಾದಯಾತ್ರೆಯ ಕೊನೆಯ ದಿನದಂದು ಅವರ ಪತ್ನಿ ರಾಧಿಕಾ ಮರ್ಚೆಂಟ್ ಮತ್ತು ತಾಯಿ ನೀತಾ ಅಂಬಾನಿ ಸೇರಿಕೊಂಡಿದ್ದರು..
ಆಧ್ಯಾತ್ಮಿಕ ಪಾದಯಾತ್ರೆಗೆ ಹೋಗುವ ನಿರ್ಧಾರದ ಬಗ್ಗೆ ತಮ್ಮ ತಂದೆ ಮುಖೇಶ್ ಅಂಬಾನಿ ಜೊತೆಗಿನ ಮಾತುಕತೆಯನ್ನು ಅನಂತ್ ಅಂಬಾನಿ ಸ್ಮರಿಸಿದರು. ಜಾಮ್ ನಗರದಿಂದ ದ್ವಾರಕಾದವರೆಗೆ ಪಾದಯಾತ್ರೆ ನಡೆಸಲು ಪ್ರೇರೇಪಿಸಿದ್ದಕ್ಕಾಗಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ನಾನು ಪಾದಯಾತ್ರೆ ಮಾಡಲು ಬಯಸಿದ್ದೇನೆ ಎಂದು ನನ್ನ ತಂದೆ ಬಳಿ ಹೇಳಿದಾಗ, ಅವರು ನನಗೆ ಬಹಳಷ್ಟು ಪ್ರೋತ್ಸಾಹ ನೀಡಿದರು. ಅವರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದು ಅನಂತ್ ಅಂಬಾನಿ ಹೇಳಿದ್ದಾರೆ.
ದ್ವಾರಕಾದ ದ್ವಾರಕಾಧೀಶ ದೇವಾಲಯವನ್ನು ಪ್ರವೇಶಿಸುವಾಗ ಅನಂತ್ ಅವರ ತಾಯಿ ನೀತಾ ಅಂಬಾನಿ ಮತ್ತು ಪತ್ನಿ ರಾಧಿಕಾ ಮರ್ಚೆಂಟ್ ಸಹ ಇದ್ದರು.
ಪಾದಯಾತ್ರೆ ದಾರಿಯುದ್ದಕ್ಕೂ ಕೆಲವರು ಅವರೊಂದಿಗೆ ನಡೆದರೆ, ಮತ್ತೆ ಕೆಲವರು ದ್ವಾರಕಾಧೀಶನ ಚಿತ್ರಗಳನ್ನು ನೀಡಿ ಶುಭ ಕೋರಿದ್ದಾರೆ.
ಅಪರೂಪದ ಹಾರ್ಮೋನುಗಳ ಅಸ್ವಸ್ಥತೆ ಕುಶಿಂಗ್ ಸಿಂಡ್ರೋಮ್ನಿಂದ ಬಳಲುತ್ತಿರುವ ಅನಂತ್, ಬೊಜ್ಜು, ಆಸ್ತಮಾ ಮತ್ತು ತೀವ್ರ ಶ್ವಾಸಕೋಶದ ಸಮಸ್ಯೆ ನಡುವೆಯೂ ಪಾದಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಈ ಆಧ್ಯಾತ್ಮಿಕ ಪಾದಯಾತ್ರೆಯಲ್ಲಿ ಅನಂತ್, ಹನುಮಾನ್ ಚಾಲೀಸಾ, ಸುಂದರಕಾಂಡ ಮತ್ತು ದೇವಿ ಸ್ತೋತ್ರವನ್ನು ಪಠಿಸುತ್ತಿದ್ದರು.