ಇತ್ತೀಚಿನ ಒತ್ತಡದ ದಿನದಲ್ಲಿ ನಾವು ನಮ್ಮ ದೇಹವು ಚೆನ್ನಾಗಿ ಕಾಣಿಸಬೇಕು ಎಂಬ ಉದ್ದೇಶದಿಂದ ಜಿಮ್, ಡಯೆಟ್ ಅಂತ ಹೆಚ್ಚು ಒತ್ತು ನೀಡುತ್ತಿದ್ದೇವೆ. ಆದ್ರೆ ನಮ್ಮ ದೇಹದೊಳಗಿನ ಅಂಗಗಳ ಬಗ್ಗೆ ನಾವು ಗಮನಕೊಡುವುದನ್ನು ಮರೆಯುತ್ತಿದ್ದೇವೆ. ಅದರಲ್ಲೂ ನಾವು ಯಕೃತ್ತಿನ ಆರೋಗ್ಯ ಕುರಿತಾಗಿ ಬಹಳ ನಿರ್ಲಕ್ಷ್ಯ ಹೊಂದಿರುವುದು ನೋಡಬಹುದು. ನಮ್ಮ ದೇಹದ ಸಮತೋಲನ ಕಾಪಾಡಲು ಯಕೃತ್ತಿನ ಕೆಲಸ ಬಹಳ ಮುಖ್ಯ. ನಮ್ಮ ದೇಹದ ಪ್ರಮುಖ ಕೆಲಸಗಳಿಗೆ ಯಕೃತ್ತಿನ ಸಹಕಾರ ಅಗತ್ಯ.
ಇತ್ತೀಚಿಗೆ ಜನರಲ್ಲಿ ಈ ಲಿವರ್ ಸಮಸ್ಯೆಗಳು ಹೆಚ್ಚಾಗಿರುವುದು ನೋಡಬಹುದು. ಯಕೃತ್ತಿನ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಯಕೃತ್ತು ದಿನವನ್ನು ಆಚರಿಸಲಾಗುತ್ತದೆ. ಇದು ಯಕೃತ್ತಿನ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುವ ಆರೋಗ್ಯಕರ ಜೀವನಶೈಲಿಯ ಪಾಲಿಸಲು ಜನರನ್ನು ಉತ್ತೇಜಿಸಲಿದೆ.
ಇನ್ನು 2025ರ ಈ ಏಪ್ರಿಲ್ 19ರಂದು ವಿಶ್ವ ಯಕೃತ್ತು ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಆಹಾರವೇ ಔಷಧ ಎಂಬ ಥೀಮ್ನಡಿ ಈ ದಿನವನ್ನು ಆಚರಿಸಲಾಗುತ್ತಿದೆ. ಇತ್ತೀಚಿಗೆ ಲಿವರ್ ಕ್ಯಾನ್ಸರ್ನಿಂದ ಹಿಡಿದು ಹಲವು ರೀತಿಯ ಸಮಸ್ಯೆಗೆ ತುತ್ತಾಗುವುದು ನೋಡಬಹುದು. ದೇಹದ ಪ್ರಮುಖ ವಿಷಕಾರಿ ಅಂಶಗಳನ್ನು ಫಿಲ್ಟರ್ ಮಾಡುವ ಕಾರ್ಯ ಮಾಡಲಿದೆ. ಹಾಗೆ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಒಂದು ವೇಳೆ ನಿಮ್ಮ ಲಿವರ್ ಸಮಸ್ಯೆಗೆ ಒಳಗಾಗಿದ್ದರೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ. ಹಾಗಾದ್ರೆ ನಿಮ್ಮ ಲಿವರ್ ಸಮಸ್ಯೆಗೆ ಒಳಗಾಗಿದೆ ಅದು ನಿಮ್ಮ ಅನಾರೋಗ್ಯ ಸಮಸ್ಯೆಗೆ ದೊಡ್ಡ ಸಮಸ್ಯೆ ತರಲಿದೆ ಎಂಬುದನ್ನು ತಿಳಿಯುವುದು ಹೇಗೆ? ನಿಮ್ಮ ಲಿವರ್ ಸಮಸ್ಯೆಗೆ ಒಳಗಾಗಿದ್ದರೆ ಕೆಲವೊಂದು ಲಕ್ಷಣಗಳನ್ನು ತೋರಿಸಲಿದೆ. ಹಾಗಾದ್ರೆ ಯಾವ ಲಕ್ಷಣಗಳನ್ನು ನಾವು ನಿರ್ಲಕ್ಷಿಸಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಸಣ್ಣ ಕೆಲಸದಲ್ಲೂ ಆಯಾಸ
ನೀವು ಸಣ್ಣ ಪುಟ್ಟ ಕೆಲಸ ಮಾಡಿದಾಗಲೂ ಅಗತ್ಯಕ್ಕಿಂತ ಹೆಚ್ಚಿನ ಆಯಾಸಕ್ಕೆ ಒಳಗಾಗುವುದು. ಅಚ್ಚರಿ ಅಂದರೆ ನೀವು ನಿದ್ರೆ ಮಾಡುವಾಗಲು ಕೂಡ ಆಯಾಸ ಎದುರಿಸುವುದು ಹಾಗೆ ಆಹಾರ ಸೇವಿಸಿದ ಬಳಿಕವು ಆಯಾಸ ಉಂಟಾದರೆ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಅಥವಾ ವೈದ್ಯರ ಭೇಟಿಯ ಅಗತ್ಯವಿದೆ ಎಂದರ್ಥ.
ನಿರಂತರ ಕಾಮಾಲೆ
ಮಕ್ಕಳಲ್ಲಿ ಸಾಮಾನ್ಯವಾಗಿ ಕಾಮಾಲೆ ಕಂಡುಬರುವುದು ನೋಡಬಹುದು. ಆದ್ರೆ ಹಿರಿಯರಲ್ಲಿನ ಕಾಮಾಲೆ ಹಲವು ಸಮಸ್ಯೆಯ ಲಕ್ಷಣವಾಗಿರಲಿದೆ. ಮುಖ್ಯವಾಗಿ ಈ ಕಾಮಾಲೆಯು ಲಿವರ್ ಸಮಸ್ಯೆಯ ಪ್ರಮುಖ ಲಕ್ಷಣ ಎನ್ನಬಹುದು. ಕೆಂಪು ರಕ್ತ ಕಣಗಳ ಹಳದಿ ವರ್ಣದ್ರವ್ಯವಾದ ಬಿಲಿರುಬಿನ್ ಅನ್ನು ಯಕೃತ್ತು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದರ್ಥವಾಗಿದೆ.
ಹೊಟ್ಟೆ ಉಬ್ಬರ
ಸಾಮಾನ್ಯವಾಗಿ ಗ್ಯಾಸ್ನಿಂದ ಹೊಟ್ಟೆ ಉಬ್ಬರ ಕಾಣಿಸಿಕೊಳ್ಳಬಹುದು, ಆದ್ರೆ ಖಾಲಿ ಹೊಟ್ಟೆಯಲ್ಲಿದ್ದಾಗಲು ಹೊಟ್ಟೆ ಉಬ್ಬರ ಅಥವಾ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದಕ್ಕೆ ಈ ಲಿವರ್ ಸಮಸ್ಯೆಗೆ ಒಳಗಾಗಿರುವುದು ಕಾರಣವಾಗಲಿದೆ.
ಚರ್ಮ ತುರಿಕೆ ಅಥವಾ ಅಲರ್ಜಿ ಲಕ್ಷಣ
ಲಿವರ್ ಸಮಸ್ಯೆಯಲ್ಲಿ ಚರ್ಮದ ಅಲರ್ಜಿ ನೋಡಬಹುದು. ಇದು ನಿರಂತರವಾಗಿ ತುರಿಕೆ ಹಾಗೂ ಕೆಂಪು ಮಚ್ಚೆಗಳಂತಹ ಲಕ್ಷಣಕ್ಕೆ ಕಾರಣವಾಗಬಹುದು. ದದ್ದು ನಿರಂತರವಾಗಿ ಆಳವಾಗಬಹುದು. ಇದು ಪಿತ್ತರಸದ ಸಮಸ್ಯೆಯಿಂದ ಉಂಟಾಗುವ ಚರ್ಮ ಸಂಬಂಧಿ ಸಮಸ್ಯೆಯಾಗಿದೆ. ಹಾಗೆ ಚರ್ಮದ ಬಣ್ಣ ಕೂಡ ಬದಲಾಗಬಹುದು. ಹಳದಿ, ಕಪ್ಪು ಮಚ್ಚೆಗಳ ಕಾಣಿಸಿಕೊಳ್ಳಬಹುದು.
ತಲೆಸುತ್ತುವಿಕೆ ಮತ್ತು ವಾಂತಿ
ಸಾಕಷ್ಟು ಕಾಯಿಲೆಗಳಿಗೆ ವಾಂತಿ ಮತ್ತು ತಲೆಸುತ್ತುವಿಕೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ. ತಲೆಸುತ್ತಿವಿಕೆ ಹೆಚ್ಚಿದಂತೆ ವಾಂತಿ ಜೊತೆಗೆ ಬೆವರುವಿಕೆ ಕಾಣಿಸಿಕೊಳ್ಳುತ್ತದೆ. ನೀವು ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೆ ಇರುವ ಸ್ಥಿತಿ ಇದಾಗಿದೆ. ಒಂದೆರಡು ಬಾರಿ ಅಲ್ಲ ಬದಲಿಗೆ ಪದೇ ಪದೇ ಈ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ.