ದಂತೇವಾಡ: ಛತ್ತೀಸಗಢದ ದಂತೇವಾಡ ಜಿಲ್ಲೆಯಲ್ಲಿ ಕನಿಷ್ಠ 26 ಮಂದಿ ನಕ್ಸಲರು ಭದ್ರತಾ ಪಡೆಗಳ ಎದುರು ಸೋಮವಾರ ಶರಣಾಗಿದ್ದಾರೆ. ಈ ಪೈಕಿ ಮೂವರ ಸುಳಿವು ನೀಡಿದವರಿಗೆ ನಗದು ಬಹುಮಾನವನ್ನು ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
'ಪೊಳ್ಳು' ಹಾಗೂ 'ಅಮಾನವೀಯ' ನಕ್ಸಲ್ ಸಿದ್ಧಾಂತದಿಂದ ಬೇಸತ್ತು ಹಾಗೂ ಸಂಘಟನೆಯಲ್ಲಿ ಭಿನ್ನಾಭಿಪ್ರಾಯ ಉಲ್ಬಣಗೊಂಡಿದ್ದರಿಂದ ಶರಣಾಗತಿ ನಿರ್ಧಾರ ಕೈಗೊಂಡಿದ್ದಾಗಿ ನಕ್ಸಲರು ತಿಳಿಸಿದ್ದಾರೆ' ಎಂದು ದಂತೇವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ಹೇಳಿದ್ದಾರೆ.
ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ 'ಜನ ಮಿಲಿಶಿಯಾ' ಕಮಾಂಡರ್ ರಾಜೇಶ್ ಕಶ್ಯಪ್, 'ಜನತಾನಾ ಸರ್ಕಾರ್' ಮುಖ್ಯಸ್ಥ ಕೋಸ ಮದ್ವಿ ಹಾಗೂ ಸಿಎನ್ಎಂ ಸಂಘಟನೆಯ ಛೋಟು ಕುಂಜಾಂ ಶರಣಾದವರಲ್ಲಿ ಪ್ರಮುಖರು ಎಂದು ಅವರು ತಿಳಿಸಿದ್ದಾರೆ.