ಅಲಿಘಡ : ಜಾತಿಗಳ ನಡುವಿನ ಭೇದವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ ಭಾಗವತ್, 'ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದು ಸ್ಮಶಾನ' ಎಂಬ ತತ್ವ ಅನುಸರಿಸುವ ಮೂಲಕ ಸಾಮಾಜಿಕ ಸಾಮರಸ್ಯಕ್ಕೆ ಹಿಂದೂಗಳು ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ.
ಅಲೀಗಢಕ್ಕೆ 5 ದಿನಗಳ ಪ್ರವಾಸ ಕೈಗೊಂಡಿರುವ ಅವರು, ಎಚ್.ಬಿ ಇಂಟರ್ ಕಾಲೇಜು ಹಾಗೂ ಪಂಚನ್ ನಗರಿ ಪಾರ್ಕ್ನಲ್ಲಿ ಸಂಘಟನೆಯ ಎರಡು ಶಾಖೆಗಳ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದರು.
ಶಾಂತಿ ಸ್ಥಾಪನೆಗೆ ಶ್ರಮಿಸುವ ಜಾಗತಿಕ ಜವಾಬ್ದಾರಿ ಭಾರತದ ಮೇಲಿದೆ. ಈ ಮಹತ್ವದ ಹೊಣೆಗಾರಿಕೆ ಪೂರೈಸಲು ಸಾಮಾಜಿಕ ಒಗ್ಗಟ್ಟು ಸಾಧಿಸುವುದು ಭಾರತದ ಪಾಲಿಗೆ ಬಹಳ ಮುಖ್ಯ ಎಂದು ಭಾಗವತ್ ಹೇಳಿದ್ದಾರೆ ಎಂದು ಆರ್ಎಸ್ಎಸ್ ಮೂಲಗಳು ತಿಳಿಸಿವೆ.
'ಸಂಸ್ಕಾರ ಹಿಂದೂ ಸಮಾಜದ ತಳಪಾಯ. ಹೀಗಾಗಿ ಪಾರಂಪರಿಕ, ಸಾಂಸ್ಕೃತಿಕ ಮೌಲ್ಯಗಳು ಹಾಗೂ ನೈತಿಕ ತತ್ವಗಳ ಆಧಾರದ ಮೇಲೆ ಸಮಾಜವನ್ನು ನಿರ್ಮಿಸಲು ಹಿಂದೂಗಳು ಶ್ರಮಿಸಬೇಕು' ಎಂದು ಹೇಳಿದ್ದಾಗಿ ಮೂಲಗಳು ಹೇಳಿವೆ.
'ಸ್ವಯಂಸೇವಕರು ಸಮಾಜದ ಎಲ್ಲ ವರ್ಗಗಳನ್ನು ತಲುಪಬೇಕು. ತಳಮಟ್ಟದಲ್ಲಿ ಸಾಮರಸ್ಯ ಮತ್ತು ಏಕತೆಯ ಸಂದೇಶವನ್ನು ಹರಡಲು ಅವರನ್ನು ತಮ್ಮ ಮನೆಗಳಿಗೆ ಆಹ್ವಾನಿಸಬೇಕು' ಎಂದೂ ಅವರು ಹೇಳಿದ್ದಾರೆ.