ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ವಕ್ಫ್ ಮಸೂದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ನಡೆದ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.
ವಕ್ಫ್ ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಮುರ್ಷಿದಾಬಾದ್ ನಲ್ಲಿ ಜಂಗಿಪುರ ಪಿಡಬ್ಲ್ಯೂಡಿ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಭಾರಿ ಹಿಂಸಾಚಾರ ಭುಗಿಲೆದ್ದಿತು.
ರಾಷ್ಟ್ರೀಯ ಹೆದ್ದಾರಿ 12 ಅನ್ನು ನಿರ್ಬಂಧಿಸಲು ಜಂಗಿಪುರದಿಂದ ಉಮರ್ಪುರಕ್ಕೆ ಮೆರವಣಿಗೆ ತೆರಳಿದಾಗ, ಪೊಲೀಸರು ಅವರನ್ನು ತಡೆದರು ಮತ್ತು ಜಗಳ ಪ್ರಾರಂಭವಾಗಿದ್ದು, ಇದರಲ್ಲಿ ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಪ್ರತಿಭಟನಾ ಮೆರವಣಿಗೆಯ ಸಮಯದಲ್ಲಿ, ಪ್ರತಿಭಟನಾಕಾರರು ಪೊಲೀಸ್ ವಾಹನವನ್ನು ಒಡೆದು ಬೆಂಕಿ ಹಚ್ಚಿದರು. ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗುತ್ತಿದ್ದಂತೆ, ಪ್ರತಿಭಟನಾಕಾರರನ್ನು ಸ್ಥಳದಿಂದ ಚದುರಿಸಲು ಹೆಚ್ಚಿನ ಪೊಲೀಸರು ಆಗಮಿಸಿದ್ದಾರೆ.
ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು, ಮುರ್ಷಿದಾಬಾದ್ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿ, ಪಶ್ಚಿಮ ಬಂಗಾಳ ಪೊಲೀಸರು ಮುರ್ಷಿದಾಬಾದ್ನ ಬೀದಿಗಳಲ್ಲಿ ಹಿಂಸಾತ್ಮಕವಾಗಿ ಓಡಾಡುತ್ತಿರುವ ಇಸ್ಲಾಮಿಕ್ ಗುಂಪುಗಳನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದಾರೆ. ಬಹುಶಃ ಗೃಹ ಸಚಿವೆ ಮಮತಾ ಬ್ಯಾನರ್ಜಿ ಅವರ ಸೂಚನೆಯ ಮೇರೆಗೆ ಪೊಲೀಸರು ಈ ರೀತಿ ಮಾಡುತ್ತಿರಬಹುದು ಎಂದಿದ್ದಾರೆ.
ಹಿಂಸಾಚಾರ ಭುಗಿಲೆದ್ದ ನಂತರ, ಈ ಪ್ರದೇಶದಲ್ಲಿ ಬೃಹತ್ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಹಲವಾರು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಘರ್ಷಣೆಯಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ ಮತ್ತು ಗಲಭೆಕೋರರನ್ನು ಚದುರಿಸಲು ಅಶ್ರುವಾಯು ಹಾರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.