ಪಾಲಕ್ಕಾಡ್: ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಿಜೆಪಿಯ ಪಾಲಕ್ಕಾಡ್ ಘಟಕದ ಅಧ್ಯಕ್ಷ ಪ್ರಶಾಂತ್ ಶಿವ ಅವರ ವಿರುದ್ಧ ಕಾಂಗ್ರೆಸ್ ಪೊಲೀಸರಿಗೆ ದೂರು ನೀಡಿದೆ.
ಬಿಜೆಪಿ ಆಡಳಿತವಿರುವ ಪಾಲಕ್ಕಾಡ್ ನಗರಸಭೆಯ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ ವಿಶೇಷಚೇತನರ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಕೆ.ಬಿ ಹೆಡಗೇವಾರ್ ಅವರ ಹೆಸರನ್ನು ಇಡಲಾಗಿದೆ.
ಇದನ್ನು ಕಾಂಗ್ರೆಸ್ ವಿರೋಧಿಸಿತ್ತು.
ಕೌಶಲ್ಯಾಭಿವೃದ್ಧಿ ಕೇಂದ್ರದ ಉದ್ಘಾಟನೆಗೆ ಕಾಂಗ್ರೆಸ್, ಯುವ ಕಾಂಗ್ರೆಸ್ ಹಾಗೂ ಫೆಡರೇಷನ್ ಆಫ್ ಇಂಡಿಯಾ (ಡಿಐಎಫ್ಐ) ಕಾರ್ಯಕರ್ತರು ಶುಕ್ರವಾರ ಅಡ್ಡಿಪಡಿಸಿದರು.
ಈ ವೇಳೆ ಪ್ರಶಾಂತ್ ಅವರು 'ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ' ಎಂದು ಹೇಳಿದ್ದರು. ಇದನ್ನು ಖಂಡಿಸಿ ಕಾಂಗ್ರೆಸ್ ದೂರು ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ರಾಹುಲ್, 'ನಾನು ಸಾರ್ವಜನಿಕರಿಂದ ಆಯ್ಕೆಯಾದ ಪ್ರತಿನಿಧಿ. ನಾನು ಆರ್ಎಸ್ಎಸ್ ವಿರುದ್ಧ ಮಾತನಾಡುತ್ತೇನೆ. ನನ್ನ ನಾಲಗೆಯನ್ನು ಕತ್ತರಿಸಿದರೂ ನಾನು ಅದರ ವಿರುದ್ಧ ಕೆಲಸ ಮಾಡುತ್ತಲೇ ಇರುತ್ತೇನೆ. ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ' ಎಂದಿದ್ದಾರೆ.