ಗುರುದಾಸ್ಪುರ: ಪಂಜಾಬ್ನ ಗುರುದಾಸ್ಪುರ ಜಿಲ್ಲೆಯ ಅಂತರರಾಷ್ಟ್ರೀಯ ಗಡಿ ಬಳಿ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ರೈತರನ್ನು ಗುರಿಯಾಗಿಸಿಕೊಂಡಿದ್ದ ಸುಧಾರಿತ ಸ್ಫೋಟಕ ಸಾಧನ(IED) ದಾಳಿಯನ್ನು ಗಡಿ ಭದ್ರತಾ ಪಡೆ(BSF)ಯ ಯೋಧ ಜೀವದ ಹಂಗು ತೊರೆದು ವಿಫಲಗೊಳಿಸಿದ್ದು, ಅವರ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ಬಿಎಸ್ಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
BSF ಪ್ರಕಾರ, ಹಗಲಿನಲ್ಲಿ BSF ಸಿಬ್ಬಂದಿ ಮತ್ತು ಸ್ಥಳೀಯ ರೈತರು ಆಗಾಗ್ಗೆ ಬಳಸುವ ಮಾರ್ಗಗಳನ್ನು ಸುರಕ್ಷಿತಗೊಳಿಸುವ ನಿಯಮಿತ ಪ್ರಯತ್ನಗಳ ಭಾಗವಾಗಿ ಗಸ್ತು ತಿರುಗುತ್ತಿತ್ತು. ಹತ್ತಿರದಿಂದ ಪರಿಶೀಲಿಸಿದಾಗ, ತಂಡವು ಶಂಕಿತ IED ಮತ್ತು ಹೊಲಗಳಲ್ಲಿ ಅಡಗಿರುವ ಗುಪ್ತ ತಂತಿಗಳ ಜಾಲವನ್ನು ಪತ್ತೆ ಮಾಡಿದೆ. ಇದು ಯೋಜಿತ ದಾಳಿಯ ಸೂಚನೆಯಾಗಿದೆ.
"ತಕ್ಷಣ ಪ್ರದೇಶವನ್ನು ಸುತ್ತುವರೆದು ಸ್ವಚ್ಛಗೊಳಿಸಲು ಯತ್ನಿಸುತ್ತಿರುವಾಗ, ಮರೆಮಾಚಿದ ಸ್ಫೋಟಕ ಸಾಧನ ಆಕಸ್ಮಿಕವಾಗಿ ಸ್ಫೋಟಗೊಂಡಿತು. ಇದು ಒಬ್ಬ ಜವಾನನಿಗೆ ಗಂಭೀರ ಗಾಯವನ್ನುಂಟುಮಾಡಿತು" ಎಂದು BSF ತಿಳಿಸಿದೆ.
ಸ್ಫೋಟದ ಹೊರತಾಗಿಯೂ, BSF ಪಡೆಗಳು ಕಾರ್ಯಾಚರಣೆಯನ್ನು ಮುಂದುವರೆಸಿದವು ಮತ್ತು ಪ್ರದೇಶದ ಸುರಕ್ಷತೆಯನ್ನು ಖಚಿತಪಡಿಸಿಕೊಂಡವು. ಈ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿದೆ ಎಂದು ಬಿಎಸ್ಎಫ್ ತಿಳಿಸಿದೆ.
ಇಂದು ಬೆಳಗಿನ ಜಾವ, ಬಿಎಸ್ಎಫ್ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಆಗಮಿಸಿ, ಸಂಪೂರ್ಣ ಶೋಧ ನಡೆಸಿ, ಐಇಡಿಗಳನ್ನು ಸ್ಥಳದಲ್ಲಿಯೇ ನಿಷ್ಕ್ರಿಯಗೊಳಿಸಿತು.