ನವದೆಹಲಿ: ಭೂಕಂಪ ಪೀಡಿತ ಮ್ಯಾನ್ಮಾರ್ಗೆ ಭಾರತವು ಮಾನವೀಯ ದೃಷ್ಟಿಯಿಂದ 31 ಟನ್ ಸಾಮಗ್ರಿಗಳನ್ನು ಭಾನುವಾರ ಹಸ್ತಾಂತರಿಸಿತು.
ಶೋಧ ಮತ್ತು ರಕ್ಷಣೆ (ಎಸ್ಎಆರ್) ಹಾಗೂ ವೈದ್ಯಕೀಯ ನೆರವು ಸೇರಿದಂತೆ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ಗೆ ಅಗತ್ಯ ಮಾನವೀಯ ನೆರವು ನೀಡಲು ಭಾರತವು 'ಆಪರೇಷನ್ ಬ್ರಹ್ಮ' ಪರಿಹಾರ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದರ ಭಾಗವಾಗಿ ಸಿ-17 ಗ್ಲೋಬ್ಮಾಸ್ಟರ್ ವಿಮಾನದಲ್ಲಿ ಭಾನುವಾರ ನೆರವು ಕಳುಹಿಸಿರುವುದಾಗಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾರ್ಚ್ 28ರಂದು ಮ್ಯಾನ್ಮಾರ್ನಲ್ಲಿ ಸಂಭವಿಸಿದ 7.7ರಷ್ಟು ತೀವ್ರತೆಯ ಭೂಕಂಪದಲ್ಲಿ 3000ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಘಟನೆ ನಡೆದ 24 ಗಂಟೆಯ ಒಳಗೆ ಭಾರತವು ಮೊದಲ ಹಂತದ ನೆರವನ್ನು ನೀಡಿತ್ತು.
ಮ್ಯಾನ್ಮಾರ್ನಲ್ಲಿ ಭಾರತೀಯ ಸೇನೆಯು ಆಸ್ಪತ್ರೆ ಘಟಕಗಳನ್ನು ಸ್ಥಾಪಿಸಿದ್ದು, 118 ಸಿಬ್ಬಂದಿ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
442 ಮೆಟ್ರಿಕ್ ಟನ್ ಆಹಾರ ಸಾಮಗ್ರಿಯನ್ನು (ಅಕ್ಕಿ, ಅಡುಗೆ ಎಣ್ಣೆ, ನೂಡಲ್ಸ್ ಹಾಗೂ ಬಿಸ್ಕತ್ತು ಸೇರಿದಂತೆ ಇತರ ವಸ್ತು) ಮ್ಯಾನ್ಮಾರ್ನ ಸ್ಥಳೀಯ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು.